ಧರ್ಮ, ದೇವರು - ಸತ್ಯ ಮತ್ತು ವಾಡಿಕೆಗಳು | ಅವಧೂತ ಶ್ರೀ ವಿನಯ್ ಗುರೂಜಿ
ಸೂರ್ಯನಿಗೆ ದಿವಾಕರ ಅಂತ ಇನ್ನೊಂದು ಹೆಸರಿದೆ. ಅಂದರೆ ಕತ್ತಲೆಯನ್ನು ನಿವಾರಿಸುವವನು ಎಂದರ್ಥ. ಹಾಗೆಯೇ ಮನುಷ್ಯರು ಈ ಪ್ರಜ್ಞೆಯನ್ನು ಹೊಂದಿರಬೇಕು. ದೇವಸ್ಥಾನಗಳಿಗೆ ಬಳೆ ಕೊಟ್ಟು ಬರುವುದಕ್ಕಿಂತ ಮನೆಯಲ್ಲಿ ಕೆಲಸ ಮಾಡುವವರಿಗೆ ಅಥವಾ ಪೌರ ಕಾರ್ಮಿಕರಿಗೆ ಬಳೆ ಕೊಡುವುದರಿಂದ ಅವರಲ್ಲುಂಟಾಗುವ ಖುಷಿಯನ್ನು ನಾವು ಕಣ್ಣಾರೆ ಆನಂದಿಸಲು ಸಾಧ್ಯ. ಹಾಗೆಯೇ ಅವರು ನಮಗೆ ಮನಸ್ಸಿನಿಂದ ಒಳ್ಳೆಯದನ್ನು ಬಯಸುತ್ತಾರೆ. ಶುದ್ಧವಾದ ಭಾವನೆ ಎಲ್ಲಾ ಮಂತ್ರಗಳಿಗಿಂತಲೂ ಮೇಲು. ಆ ಶುದ್ಧ ಭಾವನೆಯ ಮನಸ್ಸು ಖಂಡಿತ ಫಲಿಸುತ್ತದೆ. ದೇವರ ಹೆಸರಿನಲ್ಲಿ ಫಲ ಪುಷ್ಪಗಳು, ವಸ್ತ್ರಾಭರಣಗಳನ್ನು ಇಡುವ ಬದಲು ಅವುಗಳನ್ನು ಆವಶ್ಯಕತೆ ಇರುವವರಿಗೆ ನೀಡುವುದರಿಂದ ಅಧಿಕ ಫಲ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ. ಈಗಿನ ಕಾಲದಲ್ಲಿ ಜನರಿಗೆ ದೇವರ ಮೇಲಿನ ಭಕ್ತಿಯು ಭಯವಾಗಿ ಮಾರ್ಪಾಡಾಗಿದೆ. ಅದಕ್ಕೆ ಮೂಲ ಕಾರಣ ನಮ್ಮೊಳಗಿನ ಪಾಪ ಪ್ರಜ್ಞೆ. ನಾವು ನಿತ್ಯವೂ ಕೆಟ್ಟ ಕೆಲಸಗಳನ್ನು ಮಾಡುತ್ತಿರುವುದರಿಂದ ನಮಗೆ ಒಂದಲ್ಲ ಒಂದು ಕೆಟ್ಟದಾಗಿಯೇ ಆಗುತ್ತೆ ಎಂಬ ಭಯ ನಮ್ಮನ್ನು ಆವರಿಸಿರುತ್ತದೆ. ಹಾಗಾಗಿ ನಾವು ಕೆಟ್ಟದ್ದನ್ನು ಮಾಡುವುದು, ಬಯಸುವುದನ್ನು ಬಿಟ್ಟು ಬಿಡಬೇಕು. ಹಾಗೆಯೇ ಮನುಷ್ಯನ ಖಾಯಿಲೆಗಳಿಗೂ ಮೂಲ ಕಾರಣ ವಿಪರೀತ ಆಸೆಗಳೇ ಆಗಿರುತ್ತವೆ.
11 июн 2024