ಶ್ರೀ ಲಲಿತಾ ಸಹಸ್ರನಾಮ ಪಠಿಸುವುದರಿಂದ ದೊರೆಯುವ ಫಲಗಳು - ಭಾಗ 2 | Benefits of chanting sri lalita sahasranama
ಶ್ರೀ ಲಲಿತಾ ಸಹಸ್ರನಾಮದಲ್ಲಿ ಅಡಗಿರುವ ರಹಸ್ಯಗಳು | Secrets hidden in Sri Lalita Sahasranama
Benifits of chanting sri lalita sahasranama
ಲಲಿತ ಸಹಸ್ರ ನಾಮ ಪಠಿಸುವ ಉದ್ದೇಶ ಮತ್ತು ಲಲಿತ ದೇವಿಯ ಕಥೆ..!!
ಬ್ರಹ್ಮಾಂಡಪುರಾಣದಲ್ಲಿ ಹಯಗ್ರೀವ ಮುನಿಯು ಅಗಸ್ತ್ಯರಿಗೆ ಶ್ರೀಲಲಿತೋಪಾಖ್ಯಾನವನ್ನು ಹೇಳಿ ಲಲಿತಾ ಸಹಸ್ರ ನಾಮದಿಂದ ಜಗನ್ಮಾತೆಯನ್ನು ಪ್ರಾರ್ಥಿಸುತ್ತಾರೆ.
ಲಲಿತಾಸಹಸ್ರನಾಮಕ್ಕೂ ಮುನ್ನ ಬರುವ ಲಲಿತಾಂಬೆಯ ಕಥೆ ಈ ರೀತಿ ಇದೆ :
ಶಿವನು ಮನ್ಮಥನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದನು, ಚಿತ್ರಕರ್ಮನು ಮನ್ಮಥನ ಬೂದಿಯನ್ನ ಒಟ್ಟುಗೂಡಿಸಿ ಪುರುಷಾಕೃತಿಯನ್ನ ನಿರ್ಮಾಣ ಮಾಡಿದನು, ಶಿವನ ದೃಷ್ಟಿ ಬಿದ್ದಕೂಡಲೆ ಆಕೃತಿಗೆ ಜೀವ ಪ್ರವೇಶ ವಾಯಿತು,
ಚಿತ್ರಕರ್ಮನಿಂದ ಶತರುದ್ರ ಮಂತ್ರಾನುಷ್ಠಾನದ ಉಪದೇಶಪಡೆದು ರುದ್ರನನ್ನು ಪೂಜಿಸಿ ಅರವತ್ತು ಸಾವಿರ ವರ್ಷಗಳವರೆಗೆ ಚಕ್ರವರ್ತಿಯಾಗುವಂತೆ ವರಪಡೆದು ಭಂಡ ಎಂದು ಪ್ರಸಿದ್ದನಾದನು.
ರುದ್ರನ ಕೆಂಗಣ್ಣಿನಿಂದ ಸುಡಲ್ಪಟ್ಟ ಬೂದಿಯಿಂದ ಹುಟ್ಟಿದ ಭಂಡನು ರೌದ್ರ ಸ್ವಭಾವವನ್ನ ಹೊಂದಿದ್ದನು, ಶೋಣಿತಪುರದಲ್ಲಿ ರಾಜ್ಯವಾಳುತ್ತ ದೇವತೆಗಳಿಗೆ ನಾನಾವಿಧವಾದ ತೊಂದರೆಗಳನ್ನು ನೀಡುತ್ತಿದ್ದನು, ನಾರದರ ಉಪದೇಶದಂತೆ ಇಂದ್ರನು ಸಮಸ್ತ ದೇವತೆಗಳೊಂದಿಗೆ ಹಿಮಗಿರಿಯ ತಪ್ಪಲಿಗೆ ಬಂದು ಭಾಗೀರಥೀ ತೀರದಲ್ಲಿ ಪರಾಶಕ್ತಿಯ ಪೂಜೆಯನ್ನು ಯಾಗ ವಿಧಾನದಿಂದ ಮಾಡಿದನು.
ಆ ಯಜ್ಞ ಕುಂಡದಿಂದ ಅನುಪಮ ತೇಜದಿಂದ ಕೂಡಿದ ಒಂದು ಚಕ್ರಾಕಾರವು ಉದ್ಭವಿಸಿತು, ಆ ಚಕ್ರದ ಮಧ್ಯದಲ್ಲಿ ಸೂರ್ಯ ಪ್ರಭೆಯುಳ್ಳವಳು, ಬ್ರಹ್ಮ ವಿಷ್ಣು ಶಿವ ಸ್ವರೂಪಳೂ, ಸೌಂದರ್ಯಸಾರ ಸೀಮಾಂತಳೂ, ಆನಂದ ರಸ ಸಾಗರಳೂ, ಜಪಾ ಕುಸುಮದ ಕಾಂತಿಯುಳ್ಳವಳೂ, ದಾಳಿಂಬೆ ಹೂ ಬಣ್ಣದ ಸೀರೆಯನ್ನು ಉಟ್ಟಿರುವವಳೂ, ಸರ್ವಾಭರಣ ಭೂಷಿತಳೂ, ಶೃಂಗಾರರಸಕ್ಕೆ ಆಲಯದಂತಿರು ವವಳೂ, ಪಾಶ-ಕುಶ-ಇಕ್ಷು-ಕೋದಂಡ-ಪಂಚ ಬಾಣಗಳಿಂದ ಶೋಭಿಸುತ್ತಿರುವ ಕರಗಳುಳ್ಳವಳೂ ಆದ ಶ್ರೀ ಲಲಿತಾಂಬೆಯು ಅವತರಿಸಿದಳು.
ಲಲಿತಾ ಸಹಸ್ರನಾಮದ ಹಿನ್ನೆಲೆ.
ಶ್ರೀ ಗುರುಭ್ಯೋ ನಮಃ.
ಯ ಏಕೋsವರ್ಣೋ ಬಹುಧಾಶಕ್ತಿಯೋಗಾದ್ ವರ್ಣಾನನೇಕಾನ್ಹ ನಿಹಿತಾರ್ಥೋ ದಧಾತಿ (ಶ್ವೇತಾಶ್ವತರೋಪನಿಷತ್), ಪರತತ್ತ್ವಕ್ಕೆ ನಾಮರೂಪಗಳಾಗಲಿ ಇಲ್ಲ ಹೀಗಿದ್ದರೂ ವರ್ಣರಹಿತವಾದ ಒಂದೇ ತತ್ತ್ವವು ಶಕ್ತಿ ಯೋಗದಿಂದ ವಿವಿಧ ವರ್ಣಗಳನ್ನುಂಟು ಮಾಡುತ್ತದೆ.
ಇರುವ ಒಂದೇ ಶಕ್ತಿ ನಾನಾ ರೂಪ ನಾಮ ಗಳಿಂದ ಭಕ್ತರಿಂದ ಉಪಾಸ್ಯವಾಗಿರುವುದೇಕೆ? : ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ (ಭಗವದ್ಗೀತಾ), ಯಾರು ನನ್ನನ್ನು ಹೇಗೆ ಆಶ್ರಯಿಸುವರೋ ಹಾಗೆಯೇ ಅವರನ್ನು ಅನುಗ್ರಹಿಸುತ್ತೇನೆ, ಅದಕ್ಕಾಗಿ ಭಕ್ತರ ಭಾವದಂತೆ ನಾನಾ ನಾಮಗಳಿಂದ, ರೂಪಗಳಿಂದ ಉಪಾಸ್ಯನಾಗಿರುವುದು.
ಶಬ್ದಾರ್ಥಗಳು ಪರಮಾತ್ಮ ಶಕ್ತಿಯ ಅಭಿವ್ಯಕ್ತಿಯ ರೂಪ, ಪರಮಾತ್ಮ ಶರೀರಿಯಾದರೆ(ಆತ್ಮ), ಶಬ್ದಾರ್ಥಗಳು ಶರೀರವಾಗಿವೆ, ವರ್ಣಗಳಿಂದ ಶಬ್ದಗಳಾಗಿರುವುದರಿಂದ ಪ್ರತಿಯೊಂದು ವರ್ಣದಲ್ಲಿಯೂ ಶಕ್ತಿಯು ಅಂತರ್ಗತವಾಗಿರುವುದು. ಪ್ರತಿಯೊಂದು ವರ್ಣವೂ ಪರಮಾತ್ಮ ಶಕ್ತಿಯ ಪ್ರತೀಕವಾಗಿದೆ, ವರ್ಣಸಮೂಹವಾದ ನಾಮಗಳೆಲ್ಲ ದೇವತಾ ಸ್ವರೂಪವೇ ಆಗಿದೆ ಆದ್ದರಿಂದಲೇ ವೇದಗಳಲ್ಲಿ ದೈವತ್ವವನ್ನು ಕಾಣುವುದು, ನಾಮಪೂಜೆಗೆ ವೈಶಿಷ್ಟ್ಯವಿರುವುದು ಇದರಲ್ಲೆ.
ಉಪಾಸನೆಯಲ್ಲಿ 1.ದ್ವಾದಶ, 2.ಅಷ್ಟೋತ್ತರ, 3.ತ್ರಿಶತಿ ಹಾಗೂ 4. ಸಹಸ್ರನಾಮ ಪೂಜೆಗಳು ಮಹತ್ವವನ್ನು ಪಡೆದಿವೆ.
ಮಾನವನು ಪರತತ್ತ್ವವನ್ನು ರೂಪ ಗುಣಗಳಿಂದ ಕೂಡಿದುದಾಗಿ ಉಪಾಸಿಸ ಬೇಕಾದರೆ ಮಾತೃಭಾವ ಕ್ಕಿಂತ ಉದಾತ್ತವೂ ಉದಾರವೂ ಹೃದಯಂಗಮವೂ ಆದ ಬೇರೆ ಇನ್ನಾವ ಕಲ್ಪನೆಯಿರುವುದು? ಆದ ಕಾರಣ ಯೋಗಿಗಳೂ ಉಪಾಸಕರೂ ಮಾತೃ ಭಾವದಿಂದಲೆ ಪರಮಾತ್ಮನನ್ನು ಕಾಣುತ್ತಾರೆ, ಆ ಮಾತೃಭಾವವೇ ಶ್ರೀಮಾತಾ ಶ್ರೀಮಹಾರಾಜ್ಞಿಯೆಂದು, ಲಲಿತಾಂಬೆಯೆಂದು ಉಪಾಸಿಸಿರು,
ಅದಕ್ಕಾಗಿ ಲಲಿತಾ ಸಹಸ್ರನಾಮವನ್ನು ಅರ್ಥಸಹಿತವಾಗಿ ನೀಡುವ ಪ್ರಯತ್ನ ನಮ್ಮದು, ಅರ್ಥಾನುಸಂಧಾನ ಸಹಿತವಾಗಿ ಮಂತ್ರಗಳ ಅನುಷ್ಠಾನ ನಡೆಯುವಂತಾಗಬೇಕು, ನಮ್ಮೀ ಪ್ರಯತ್ನಕ್ಕೆ ಲಲಿತಾಂಬೆಯ ಆಶಿರ್ವಾದವೂ ಲಭಿಸಲೆಂದು ಪ್ರಾರ್ಥಿಸೋಣ.
ಲಲಿತಾ ಸಹಸ್ರನಾಮದ ಹಿನ್ನೆಲೆ - 2 : ಯಜ್ಞಕುಂಡ*ದಲ್ಲಿ ಉತ್ಪನ್ನವಾದ ಚಕ್ರಾಕಾರದ ಮಧ್ಯೆ ಅವತರಿಸಿದ ದೇವಿಯು ದೇವತೆಗಳ ಪ್ರಾರ್ಥನೆಯಂತೆ ಭಂಡಾಸುರನ ನಾಶಕ್ಕೆ ಸಮ್ಮತಿಸಿದಳು, ಶಿವನನ್ನು ವರಿಸಿ ಮಹಾರಾಜ್ಞಿಯಾದಳು. ಅನಂತರ ಪರಬ್ರಹ್ಮ ಸ್ವರೂಪಿಣಿಯು ಭಂಡಾಸುರನನ್ನು ಇತರ ದೈತ್ಯರನ್ನು ಕೊಂದು ಶೋಣಿತಪುರವನ್ನು ನಾಶ ಮಾಡಿದಳು.
ದೇವತೆಗಳು ದೇವಿಯನ್ನು ಸ್ತುತಿಸಿ ಪತಿ ಮೃತ್ಯುವಿನಿಂದ ನೊಂದಿರುವ ರತಿಯನ್ನು ಅನುಗ್ರಹಿಸ ಬೇಕೆಂದು ಬೇಡಿಕೊಂಡರು, ಕರುಣಾಮಯಿಯಾದ ದೇವಿಯು ರತಿಯ ದುಃಖವನ್ನ ಸಹಿಸಲಾರದೆ ತನ್ನ ಕೃಪಾಕಟಾಕ್ಷದಿಂದ ಮನ್ಮಥನನ್ನು ಪುನಃ ಬದುಕಿಸಿದಳು,
ಅನಂತರ ವಿಶ್ವಕರ್ಮನು ಮತ್ತು ಮಯನು ಮೇರುಪರ್ವತದ ಮಧ್ಯಶಿಖರದಲ್ಲಿ ದೇವಿಗಾಗಿ ಶ್ರೀಪುರವೆಂಬ ಪಟ್ಟಣವನ್ನು ನಿರ್ಮಿಸಿದರು, ಶ್ರೀಪುರದಲ್ಲಿ ಚಿಂತಾಮಣಿಗೃಹ ವೆಂಬ ಅರಮನೆಯಿರುವುದು, ಇದರ ಮಧ್ಯದಲ್ಲಿ ಬಿಂದು ಪೀಠವೆಂದು ಪ್ರಸಿದ್ಧವಾದ ದೇವಿಯ ಪೀಠವಿದೆ.
ಆ ಮಹಾಪೀಠದಲ್ಲಿ ಶ್ರೀದೇವಿಯ ಮಂಚರತ್ನವು ವಿರಾಜಿಸುತ್ತಿರುವುದು, ಬ್ರಹ್ಮ-ವಿಷ್ಣು-ಈಶ್ವರ-ಮಹೇಶ್ವರರೇ ಇದರ ನಾಲ್ಕು ಕಾಲುಗಳು, ಸದಾಶಿವನೇ ಈ ಮಂಚದ ಹಲಗೆ, ಇದರ ಮೇಲೆ ಪೂರ್ವ ದಿಙ್ಮುಖನಾಗಿ ಭಗವಂತನಾದ ಕಾಮೇಶ್ವರ ನು ಕುಳಿತಿರುವನು, ಆ ಕಾಮೇಶ್ವರನ ಅಂಕದ ಮೇಲೆ ಸದಾ ಷೋಡಶ ವರ್ಷದವಳಾದ ಶ್ರೀಲಲಿತಾಂಬಿಕೆಯು ಕುಳಿತಿರುವಳು.
ಶ್ರೀಚಕ್ರವು ರೇಖಾಕೃತಿಯಿಂದ ಶ್ರೀಪುರವನ್ನು ರೂಪಿಸಿದೆ, (ಸೌಂದರ್ಯಲಹರಿಯಲ್ಲಿ ಇದೆ ರೀತಿ ಶಂಕರಾಚಾರ್ಯರು ವರ್ಣಿಸಿದ್ದಾರೆ), ಶ್ರೀ ಶಂಕರಾಚಾರ್ಯರು, ಭಗವತಿಯ ಕರುಣಾ ಮೃತವನ್ನು ವರ್ಣಿಸುತ್ತಾ, ಭಕ್ತಿಯಿಂದ ಅಮ್ಮಾ ಎಂದರೆ ಸಾಕು, ಕರುಣೆಯ ವರ್ಷಧಾರೆಯನ್ನು ಸುರಿಸಲು ಭಗವತಿ ಲಲಿತಾ ಮಹಾತ್ರಿಪುರ ಸಂದರಿ ಕಾಯುತ್ತಾ ಇರುತ್ತಾಳಂತೆ, ಶ್ರೀದೇವಿಯ ಅನುಗ್ರಹ ಎಂತಹದ್ದೆಂದರೇ, ಏಕ ಕಾಲದಲ್ಲಿಯೇ ಭೋಗವನ್ನೂ - ಮೋಕ್ಷವನ್ನೂ ಎರಡನ್ನೂ ಕರುಣಿಸುವವಳು.
ಇಂತಹ ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಲು ಇರುವ ಮಾರ್ಗಗಳಲ್ಲಿ, ಶ್ರೀವಿದ್ಯಾ ಉಪದೇಶದ ಮೂಲಕ, ಶ್ರೀಚಕ್ರ ವನ್ನು ಅರ್ಚಿಸುವುದು ಒಂದಾದರೆ, ಸೌಂದರ್ಯ ಲಹರೀ ಮತ್ತು ಲಲಿತಾ ಸಹಸ್ರ ನಾಮ ಪಠಿಸುವುದು ಅತ್ಯಂತ ಸುಲಭವೂ ಉತ್ಕೃಷ್ಟವೂ ಆದದ್ದು, ಇಂತಹ ಘನವಾದ ಲಲಿತಾ ಸಹಸ್ರ ನಾಮವನ್ನು ಅರ್ಥಸಹಿತ ತಿಳಿದು ಭಗವತಿಯ ಅನುಗ್ರಹಕ್ಕೆ ಪಾತ್ರರಾಗೋಣ.
25 июл 2021