ಆಧುನಿಕತೆಯ ಕಡಲಲ್ಲಿ TikTok, Reels ಎಂಬ ಬಲೆಗಳಿಗೆ ಬಿದ್ದು ಕೆಲವರು ನರಳಾಡುತ್ತಿರುವಾಗ...ಕಣ್ಮರೆಯಾಗುತ್ತಿರುವ ಪ್ರಾಚೀನ ಸಾಂಪ್ರದಾಯಿಕ ಜಾನಪದ ಕಲಾ ಪ್ರಕಾರವಾದ ಆಟಿ ಕಳೆಂಜನನ್ನು ತುಳುನಾಡಿನ ಕೆಲವೊಂದು ಹಳ್ಳಿಗಳಲ್ಲಿ ಇಂದಿಗೂ ದೈವದ ನೇಮ/ಕೋಲ ಕಟ್ಟುವ ಕಲಾವಿದರು ತಮ್ಮ ಮಕ್ಕಳ ಮೂಲಕ ಉಳಿಸುವ ಪ್ರಯತ್ನದಲ್ಲಿದ್ದಾರೆ... ಹಿರಿಯರು ಹೇಳುವ ಪ್ರಕಾರ ಮನೆಯ ಅಂಗಳಕ್ಕೆ ಕಾಲಿಡಲಾಗದಂತಹ ಮಳೆ ಆಟಿ ತಿಂಗಳಲ್ಲಿ ಸುರಿಯುತಿತ್ತು, ಹೊರಗಡೆ ಹೋಗಲು ಕಷ್ಟಕರವಾಗುವ ಈ ಸಂದರ್ಭಕ್ಕೆ ಪೂರ್ವ ತಯಾರಿಯಾಗಿ ಆಗಿನ ಕಾಲದ ಜನರು ಮನೆಯ ಮೇಲಂತಸ್ತಿನಲ್ಲಿ ಅಡಿಗೆಗೆ ಬೇಕಾಗುವಂತಹ ಮಸಾಲೆ, ತರಕಾರಿ ಇತ್ಯಾದಿ ಸಾಮಾಗ್ರಿಗಳನ್ನು ಶೇಖರಿಸಿಡುತ್ತಿದ್ದರು. ಗುತ್ತ್ತುಮನೆಯ ಕೆಲವರು ಆಟಿ ಕಳೆಂಜನಿಗೆಂದೇ ವಿಶೇಷವಾಗಿ ಸಾಮಾಗ್ರಿಗಳನ್ನು ತೆಗೆದಿಡುತ್ತಿದ್ದರಂತೆ...ಎಡೆಬಿಡದೆ ಸುರಿಯುವ ಮಳೆಗೆ ರೋಗ ರುಜಿನಗಳೂ ಹೆಚ್ಚಾಗೆ ಹಬ್ಬುತ್ತಿದ್ದ ಕಾಲವದು, ಊರಿಗೆ ಬಂದ ಮಹಾಮಾರಿಯ ನಿವಾರಣೆಗೆ ಹುಟ್ಟಿದ ಶಕ್ತಿಯೇ ಆಟಿ ಕಳೆಂಜ.ದೈವವನ್ನು ನೆನಪಿಸುವ ವರ್ಣರಂಜಿತ ಉಡುಪಿನಲ್ಲಿ, ಯುವ ಕಲಾವಿದರು ಮುಖಕ್ಕೆ ಅರದಲ (ಹಳದಿ ಬಣ್ಣ), ತುಟಿಗೆ ಇಂಗ್ಲಿಕ (ಕೆಂಪು ಬಣ್ಣ), ಪೆಲತ್ತ ಮಂಜಲ್ (ಹಲಸಿನ ಮರದ ಚೆಕ್ಕೆಯಿಂದ ತಯಾರಿಸಿದ ಕಪ್ಪು ಬಣ್ಣ) ಇತ್ಯಾದಿ ಬಣ್ಣಗಳ ಅಲಂಕಾರದೊಂದಿಗೆ, ಕಪ್ಪು ಗಡ್ಡ (ಕೆಲವೆಡೆ ಕೇಸರಿ, ಕೆಲವೆಡೆ ಗಡ್ಡವಿಲ್ಲದೆ), ತಲೆಗೆ ಹೂವಿನ ದಂಡೆ, ತಿರಿಯ ಕಿರೀಟ, ತಲೆಮಣಿ, ಕಾಲಿಗೆ ಗೆಜ್ಜೆ, ಕೈಗೆ ಛತ್ರ/ತತ್ರ (ತಾರಿ, ಪೊನ್ನೆ,ಪಣೊಲಿ ಇತ್ಯಾದಿ ಮರದ ಎಲೆ, ನಾರು ಸೇರಿಸಿ ಮಾಡಿದ ಛತ್ರಿ) ಸೊಂಟಕ್ಕೆ ತಿರಿ, ತುಳಸಿ,ಕೇಪುಲ ಇತ್ಯಾದಿ ಹೂವಿನ ಅಲಂಕಾರದೊಂದಿಗೆ (ಊರಿನಿಂದ ಊರಿಗೆ ಅಲಂಕಾರ ಮತ್ತು ವೇಷಭೂಷಣದಲ್ಲಿ ವ್ಯತ್ಯಾಸಗಳು ಇರಬಹುದು) ಗ್ರಾಮದ ಮನೆ ಮನೆಗೆ ತೆರಳಿ, ಊರಿಗೆ ಸೇರಿದ ಮಹಾಮಾರಿ ಕಳೆಯಲು ಕಳೆಂಜ ಬಂದ ಎನ್ನುತ್ತಾ ಮನೆಯ ತುಳಸಿ ಕಟ್ಟೆಯ ಸಮೀಪ ಹಿಂಬಾಲಕರು ಹೇಳುವ ಸಂಧಿಗೆ (ಕಳೆಂಜನ ಹಿನ್ನೆಲೆಯ ಹಾಡು) ಬಡಿಯುವ ಕರಡೆ / ತೆಂಬರೆಯ (ಸಣ್ಣ ಡೋಲು) ಸದ್ದಿಗೆ ಕೈಯಲ್ಲಿರುವ ಛತ್ರವನ್ನು ತಿರುಗಿಸುತ್ತ, ಸಾಂಪ್ರದಾಯಿಕ ಹೆಜ್ಜೆ ಹಾಕುತಿದ್ದರು.ಇದಕ್ಕೆ ಪ್ರತಿಯಾಗಿ ಜನರು ಕಲಾವಿದರಿಗೆ ಅಕ್ಕಿ, ತರಕಾರಿಗಳು, ಮಸಾಲೆ, ಹಣ ಇತ್ಯಾದಿ ನೀಡುತ್ತಿದ್ದರು. ಕಳೆಂಜನ ಭೇಟಿ ರೋಗ ರುಜಿನಗಳ ನಡುವೆ ನಲುಗಿ ಹೋಗುತ್ತಿದ್ದ ಮನಸ್ಸುಗಳಿಗೆ ಧೈರ್ಯ ತುಂಬುತ್ತಿದ್ದ ಹಾಗೆ ಗದ್ದೆ, ತೋಟದ ಬೆಳೆಗಳಿಗೆ, ಜಾನುವಾರುಗಳಿಗೆ ಬರುತ್ತಿದ್ದ ಸಮಸ್ಯೆಗಳಿಗೆ ತಡೆಯೊಡ್ಡಿ ಜನರಿಗೆ ಸಮೃದ್ಧಿಯನ್ನೂ ತರುತಿತ್ತು..ಸಣ್ಣ ಪ್ರಾಯದಲ್ಲೇ ಕಾಲಿಗೆ ಗೆಜ್ಜೆ, ಮುಖಕ್ಕೆ ಬಣ್ಣ ಹಚ್ಚುತ್ತಿದ್ದ ಕಲಾವಿದರಿಗೆ ಕಳೆಂಜನ ಆಚರಣೆ ದೈವದ ಚಾಕರಿ ಮಾಡಲು ಮೊದಲ ಹೆಜ್ಜೆಯೆಂದೂ ಹೇಳಲಾಗುತ್ತದೆ. ಆದಾಗ್ಯೂ ಅಭಿವೃದ್ಧಿ, ರಾಜಕೀಯ, ಶಿಕ್ಷಣ ಮತ್ತು ಹೆಚ್ಚಿದ ಉದ್ಯೋಗಾವಕಾಶಗಳ ಹೆಸರಿನಲ್ಲಿ, ಭತ್ತದ ಕೃಷಿಯಿಂದ ವಾಣಿಜ್ಯ ಬೆಳೆಗಳಿಗೆ ಬೃಹತ್ ಪ್ರಮಾಣದ ಸ್ಥಳಾಂತರದಲ್ಲಿ ಈ ಸಂಪ್ರದಾಯ ಕಣ್ಮರೆಯಾಗುತ್ತಿರುವುದು ಮಾತ್ರ ಸುಳ್ಲಲ್ಲ... ಆಗಿದ್ದ ಮಹಾಮಾರಿ ಈಗಿಲ್ಲವಲ್ಲಾ? ಇನ್ನ್ಯಾಕೆ ಇಂತಹ ಆಚರಣೆಗಳು? ಮುಂದುವರಿದ ತಂತ್ರಜ್ಞಾನ, ತಜ್ಞ ವೈದ್ಯರಿರುವಾಗ ಹಿರಿಯರ ಎಲ್ಲಾ ನಂಬಿಕೆ, ಆಚರಣೆ, ಆಹಾರ ಪದ್ಧತ್ತಿಗಳು ಮೂಢ ನಂಬಿಕೆಯೆನ್ನುತ್ತಿದ್ದವರಿಗೆ ಈಗಿನ ಕೊರೊನಾ ನಂಬಿಕೆಯ ಪಾಠ ಕಲಿಸುವುದೇ ಎಂದು ಕಾದು ನೋಡಬೇಕಿದೆ. #aati #kalenja #tulunad #culture #rituals #gaggara #daivradhane #gaggaraaround16holyrituals #kuttar #thimmakka #kuttharthimmakka
4 сен 2024