ಆದೂರು ಕಲ್ಲುರ್ಟಿ ದೈವಸ್ಥಾನ FOX24LIVE NEWS KERALA
ಕಲ್ಲುಟ್ಟಿ ಮತ್ತು ಕಲ್ಕುಡ ಕಥೆ "
ತುಳುನಾಡಿನ ಕಾರ್ಕಳ ಸೀಮೆಯ ಒಂದು ಹಳ್ಳಿಯಲ್ಲಿ ಕಲ್ಲು ಕುಟಿಗ ಜನಾಂಗದ ಶಿಲ್ಪಿಗಳ ತುಂಬು ಸಂಸಾರವೊಂದಿತ್ತು. ಮನೆಯ ಯಜಮಾನ ಶಂಬು ಕಲ್ಕುಡ ಅಪ್ರತಿಮ ಶಿಲ್ಪಿಯಾಗಿದ್ದನು. ಶ್ರವಣಬೆಳಗೋಳದಲ್ಲಿ ಸುಂದರವಾದ ಬಾಹುಬಲಿ ಮೂರ್ತಿಗೆ ಜನ್ಮ ನೀಡಿದ ಶಂಬು ಕಲ್ಕುಡ ಅಲ್ಲಿಯ ಅರಸರ ಚದುರಂಗದ ಆಟದಿಂದ ಹೊರ ಬರಲಾರದೆ ಕೀರ್ತಿಶೇಷನಾಗುತ್ತಾನೆ. ಮುಂದೆ ಇಂತಹ ಮೂರ್ತಿ ಇನ್ನೆಲ್ಲಿಯೂ ತಲೆ ಎತ್ತಬಾರದು ಅನ್ನುವ ಅಸೂಯಭಾವನೆ ಶಂಬು ಕಲ್ಕುಡನ ಸಾವಿನಲ್ಲಿ ಅಂತ್ಯಗೊಂಡಿತ್ತು.ತಾನು ಕೆತ್ತಿದ ಮೂರ್ತಿಯಿಂದಲೇ ತನಗೆ ಮರಣವಾಯಿತು ಇನ್ನೆಂದಿಗೂ ನಮ್ಮ ಮಕ್ಕಳನ್ನು ಹಣ ಅಥವಾ ಕೀರ್ತಿಯ ಆಸೆಗೆ ಮಕ್ಕಳನ್ನು ಅರಸರ ಬಳಿಗೆ ಮೂರ್ತಿ ಕೆತ್ತಲು ಕಳುಹಿಸದಂತೆ ಸಾಯುವ ಕಾಲಕ್ಕೆ ತನ್ನ ಹೆಂಡತಿಯಾದ ಈರಮ್ಮಳಿಗೆ ಚಾರನ ಕೈಯಲ್ಲಿ ಹೇಳಿ ಕಳುಹಿಸಿದ್ದ.
ತುಂಬು ಸಂಸಾರ. ಬಡತನ ಮನೆಯಲ್ಲಿ ಸೆರಗು ಹಾಕಿ ಮಲಗಿಕೊಂಡಿತ್ತು. ಮನೆಯ ಆಧಾರಸ್ತಂಬ ಕಳಚಿ ಬಿದ್ದಾಗ ಒಪ್ಪತ್ತಿನ ಊಟಕ್ಕೂ ತಾತ್ವರ ಉಂಟಾಗುತ್ತದೆ. ಆರನೆ ಮಗ ಬೀರನಿಗೆ ಅಪ್ಪ ಶಂಬು ಕಲ್ಕುಡ ತನ್ನೆಲ್ಲಾ ಶಿಲ್ಪಿ ವಿದ್ಯೆಯನ್ನು ಧಾರೆಯೆರೆದು ತನ್ನ ಕುಲಕಸೂಬಿನ ಕೊಂಡಿಯನ್ನು ಉಳಿಸಿಕೊಂಡಿದ್ದ.ಅಪ್ಪನನ್ನೇ ಮೀರಿಸುವ ಶಿಲ್ಪಿ ವಿದ್ಯೆಯನ್ನು ಮಗ ಬೀರ ತನ್ನದಾಗಿಸಿಕೊಂಡಿದ್ದನು.ಆದರೆ ಅಪ್ರತಿಮ ಶಿಲ್ಪಿಯೋಬ್ಬನಿಗೆ ರಾಜಾಶ್ರಯ ಸಿಗದೇ ಹೋದರೆ ತಾನು ಕಲಿತ ವಿದ್ಯೆ ಇದ್ದೂ ಪ್ರಯೋಜನವಿಲ್ಲ. ಬಡತನ ಹಸಿವು ದಿನಚರಿಯಾಗುತ್ತದೆ. ಹೊಟ್ಟೆ ತು೦ಬಾ ಉ೦ಡು ತೇಗಿದ ದಿನವಿಲ್ಲ. ಬಾಳಿನಲ್ಲಿ ಸ೦ತಸದ ನಗುವಿಲ್ಲ. ಎಲ್ಲರಂತೆ ಬಾಳುವುದು ದುಸ್ತರವಾಗುತ್ತದೆ.ನೆರವಿಲ್ಲದೆ ಸಂಸಾರ ಬಡತನದ ನೆರೆಯಲ್ಲಿ ಕೊಚ್ಚಿಕೊಂಡು ಉಳಿವಿಗಾಗಿ ಬೇಡುತ್ತಿತ್ತು
ಹೀಗೆ ಕಷ್ಟದ ಕತ್ತಲಲ್ಲಿ ಕೈ ತೊಳೆಯುತ್ತಿರುವ ಸಂಸಾರದ ಮುಂದೆ ಅದೊಂದು ದಿನ ಕಾರ್ಕಳದ ಭೈರವ ಅರಸನ ಚಾರನೊಬ್ಬ ಓಲೆಯೊಂದನ್ನು ಹೊತ್ತು ತಂದಿದ್ದ. ಆ ಒಲೆಯ ಒಕ್ಕಣೆ ಹೀಗಿತ್ತು. ಕಾರ್ಕಳದ ಭೈರವ ಅರಸನು ಜೈನ ಧರ್ಮದ ಆರಾಧಕನಾಗಿದ್ದು ತನ್ನ ಹೆಸರು ಚಿರಾಸ್ಥಾಯಿಯಾಗಿ ಉಳಿಯುವಂತೆ ಮಾಡಲು ಬಲು ಸುಂದರವಾದ ಬಾಹುಬಲಿಯ ಮೂರ್ತಿಯನ್ನು ಕೆತ್ತಲು ನಿರ್ಧರಿಸಿದ್ದು. ಅದಕ್ಕೆ ಯೋಗ್ಯನಾದ ಶಿಲ್ಪಿ ಬೀರ ಶಂಬು ಕಲ್ಕುಡನಲ್ಲದೆ ಈ ಜಗತ್ತಿನಲ್ಲಿ ಮತ್ತೊಬ್ಬನಿಲ್ಲ. ನಮ್ಮ ಅಭಿಲಾಷೆಯನ್ನು ಒಪ್ಪಿ ನಮ್ಮ ಆಸೆಯನ್ನು ಕಾರ್ಯರೂಪಕ್ಕೆ ತಂದರೆ, ಹತ್ತೂರನ್ನು ಉಂಬಳಿಯಾಗಿ ನೀಡುತ್ತೇವೆ. ಆನೆಯ ಮೇಲೆ ಮೆರವಣಿಗೆ ಬರಿಸಿ ಆನೆ ಹೊರುವಷ್ಟು ಚಿನ್ನ ಬೆಳ್ಳಿಯನ್ನು ಕಾಣಿಕೆಯಾಗಿ ನೀಡುತ್ತವೆ. ಅದಲ್ಲದೆ ಕೈಗೆ ಚಿನ್ನದ ಕಡಗ ತೊಡಿಸಿ ಆಸ್ಥಾನದ ಶಿಲ್ಪಿಯಾಗಿ ಸ್ವೀಕರಿಸುತ್ತೇವೆ . ನಿಮ್ಮ ಒಪ್ಪಿಗೆಯ ಸಂದೇಶಕ್ಕೆ ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದೇನೆ ಅನ್ನುತ್ತ ಅರಸನ ಅಂಕಿತದ ಷರ ಬರೆದಿತ್ತು.ಭೈರವ ಅರಸನೇ ತನ್ನ ರಾಜ ಮುದ್ರೆಯನ್ನು ಒತ್ತಿದ್ದ.
ಶಿಲ್ಪಿಯೋಬ್ಬನಿಗೆ ರಾಜಾಶ್ರಯದ ಕರೆಯೋಲೆ ಬಂದರೆ ಕೇಳಬೇಕೆ ? ಬೀರ ಎಂದಿಲ್ಲದಂತೆ ಖುಷಿಗೊಳ್ಳುತ್ತಾನೆ. ಒಳಗೊಳಗೇ ಕನಸಿನ ಗೋಪುರ ಕಟ್ಟಿಕೊಳ್ಳುತ್ತಾನೆ. ತನ್ನನ್ನು ಕಳುಹಿಸಿಕೊಡುವಂತೆ ತನ್ನ ಪ್ರೀತಿಯ ತಾಯಿಯನ್ನು ಅಂಗಲಾಚುತ್ತಾನೆ. ಆದರೆ ಹೆತ್ತ ಕರುಳು ಮಮ್ಮಲ ಮರುಗುತ್ತದೆ. ಅರಸರ ಸಹವಾಸ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ, ನಾವು ಒಪ್ಪತ್ತು ಗಂಜಿಯಾದರೂ ಕುಡಿದು ಸುಖವಾಗಿರೋಣ ಆದರೆ ದುಷ್ಟರೂ ಅಸೂಯ ಪ್ರವೃತಿಯರಾದ ಅರಸರ ಒಡನಾಟ ನಮಗೆ ಬೇಡ ಮಗು ಎಂದು ಪರಿ ಪರಿಯಾಗಿ ಮಗನಿಗೆ ಬುದ್ಧಿವಾದವನ್ನು ಹೇಳುತ್ತಾಳೆ.
ಮಾರನೆದಿನ ಬಾನ ಭಾಸ್ಕರ ಭೂಮಿಗೆ ಬಣ್ಣದ ಬೆಳಕು ಚೆಲ್ಲುವ ಮುನ್ನವೇ ಉತ್ಸಾಹದಿಂದ ಏಳುತ್ತಾನೆ. ತನಗೆ ಬೇಕಾದ ಪರಿಕರಗಳನ್ನು ಜೋಡಿಸಿಕೊಳ್ಳುತ್ತಾನೆ. ತಾಯಿಯ ಕರುಳೇ ಕರಗಿ ಕಣ್ಣೀರಾಗಿ ಹರಿದಾಗ ಮಗ ಬೀರ ಕಲ್ಕುಡ ತನ್ನ ಪ್ರೀತಿಯ ತಾಯಿಯನ್ನು ಅಪ್ಪಿಕೊಂಡು ತನ್ನ ಕೈಯಿಂದ ತಾಯಿಯ ಕಣ್ಣೀರನ್ನು ಒರಸುತ್ತಾನೆ. ಅರಸರು ಕರೆದು ಹೇಳಿದ ಕೆಲಸವನ್ನು ಕಾರಣವಿಲ್ಲದೆ ತಿರಸ್ಕರಿಸಿದರೆ ಸುಮ್ಮನೆ ಅರಸರೊಂದಿಗೆ ಹಗೆತನ ಬೆಳಸಿಕೊಂಡಂತೆ ಆಗುತ್ತದೆ ಅನ್ನುವುದನ್ನು ತಾಯಿಗೆ ವಿವರಿಸಿ ಹೇಳುತ್ತಾನೆ. ಮೇಲಾಗಿ ಅಪ್ಪ ಕಲಿಸಿದ ಅಪೂರ್ವವಾದ ವಿದ್ಯೆಯನ್ನು ನನ್ನೊಳಗೆ ಸಾಯಲು ಬಿಡುವುದು ಶಿಲ್ಪಿಯೊಬ್ಬನಿಗೆ ಯೋಗ್ಯವಾದ ನಡೆಯಲ್ಲ ಅನ್ನುವುದನ್ನು ತನ್ನ ತಾಯಿಗೆ ಮನದಟ್ಟು ಮಾಡುತ್ತಾನೆ. ದುರ್ಭರವಾದ ಬದುಕು ಮತ್ತು ದುಸ್ತರರವಾದ ಬಾಳನ್ನು ಗೆದ್ದು ತುಳುನಾಡಿನಲ್ಲಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸುತ್ತೇನೆ ಅನ್ನುವ ಭರವಸೆಯನ್ನು ತಾಯಿಗೆ ನೀಡಿ ಆಶೀರ್ವಾದ ಬೇಡುತ್ತಾನೆ. ಮಗ ಹಠ ಹಿಡಿದಾಗ, ಒಲ್ಲದ ಮನಸಿನಿಂದ ತಾಯಿ ಈರಮ್ಮ ಮಗನಿಗೆ ಆಶೀರ್ವಾದ ನೀಡಿ ಹರಸುತ್ತಾಳೆ. ತುಕ್ಕು ಹಿಡಿದ ಉಳಿ ಮತ್ತು ಬಾಜಿಯನ್ನು ಜೋಳಿಗೆಯಲ್ಲಿ ಹಾಕಿಕೊಂಡು ಕಾರ್ಕಳದ ಅರಸನ ಅರಮನೆಯ ಹಾದಿ ಹಿಡಿಯುತ್ತಾನೆ ಬೀರ ಕಲ್ಕುಡ
7 окт 2024