|| ಸಂಕ್ಷಿಪ್ತ ಶ್ರೀ ಗುರುಚರಿತ್ರೆ |
ಸರಸ್ವತಿ ಗಂಗಾಧರ ಗುರುಭಕ್ತನಿಗೊಲಿದು ಬಂದನಾ ಶ್ರೀದತ್ತ | ಪರಿಪರಿತಾಪವ ಕೇಶವ ಕಳೆಯುತ ನಿಜಸುಖವಿತ್ತನು ಶ್ರೀದತ್ತ ||೧||
ಕಷ್ಟದಿಂದ ಕಂಗೆಡುವ ಬಾಲಕನ ಕಂಡ ಸಿದ್ಧಮುನಿ ಶ್ರೀದತ್ತ | ದುಷ್ಟ ಭಾವನೆಯ ಬಿಟ್ಟು ಭಜಿಸಿದರೆ ಕೊಟ್ಟು ಕಾಯುವನು ಶ್ರೀದತ್ತ ||೨||
ನಿಂತು ನುಡಿವ ಯೋಗೀಂದ್ರನಂಪ್ರಿಯನು ಪಿಡಿದು ಕೇಳಿದ ಶ್ರೀದತ್ತ | ಇಂತು ಕರುಣೆಯದು ಕೊನೆಗೆ ಬಂದಿತೇ ಪಾಲಿಸು ಪಾಲಿಸು ಶ್ರೀದತ್ತ ||೩||
ಆಲಿಸು ಕುವರನೆ ಶ್ರೀಗುರುಚರಿತೆಯ ಭವತಾರಕನವ ಶ್ರೀದತ್ತ | ತೇಲುವ ಎಲ್ಲವ ಹಸಿವನು ಹಿಂಗಿಸಿ ಹರುಷದಿ ಕಾಯುವ ಶ್ರೀದತ್ತ ||೪||
ಇವನೇ ದತ್ತನು ಅನಸೂಯಾತ್ಮಜ ವಿಶ್ವನಿಯಾಮಕ ಶ್ರೀದತ್ತ | ಭವತಿಯ ನೆವದಲಿ ವಿಪ್ರನ ಮಡದಿಗೆ ಸುತನಾದನು ತಾ ಶ್ರೀದತ್ತ ||೫||
ಶ್ರೀಪಾದ ಶ್ರೀವಲ್ಲಭ ನಾಮದಿ ಕುಲ ಉದ್ಧರಿಸಿದ ಶ್ರೀದತ್ತ | ಕಾಪಿಡೆ ನಡೆದನು ಭಾರತ ಜನವನು ಯಾತ್ರೆಯ ನೆವದಿಂ ಶ್ರೀದತ್ತ ||೬||
ತೀರ್ಥಕ್ಷೇತ್ರಗಳ ಸುತ್ತಿ ಪತಿತರನು ಪಾವನಗೊಳಿಸಿದ ಶ್ರೀದತ್ತ | ಸಾರ್ಥಕವಾದ ಗೋಕರ್ಣವ ನೋಡುತ ಕುರವದಿ ನಿಂತನು ಶ್ರೀದತ್ತ ||೭||
ಮಂದಮತಿ ಅಂಬಾಕುಮಾರನಿಗೆ ಜ್ಞಾನದಾತನು ಶ್ರೀದತ್ತ | ಮಂದವಾಸರದ ಪ್ರದೋಷ ಪೂಜೆಯ ಮಹಿಮೆಯ ಹೇಳಿದ ಶ್ರೀದತ್ತ ||೮||
ಅಗಸಗ ಮುಂದಣ ಜನುಮದಿ ರಾಜ್ಯದ ಭೋಗವನಿತ್ತನು ಶ್ರೀದತ್ತ | ಅಗಲದಂತಿರಲು ವಲ್ಲಭೇಶನ ಸಂಕಟ ಕಳೆದನು ಶ್ರೀದತ್ತ |೯||
ವಚನದಂತೆ ಅಂಬಾ ಮಾಧವರಿಗೆ ಬಾಲಕನಾದನು ಶ್ರೀದತ್ತ | ಉಚಿತಸಮಯ ಬರೆ ನಾಲ್ಕೂ ವೇದದ ಸಾರವ ಹೇಳಿದ ಶ್ರೀದತ್ತ ।।೧೦||
ಅವಳೀತನಯರ ತಾಯಿಗೆ ಕರುಣಿಸಿ ಕಾಶಿಗೆ ಬಂದನು ಶ್ರೀದತ್ತ | ನವಸಂವತ್ಸರವಿರೆ ಸನ್ಯಾಸವ ಸ್ವೀಕರಿಸಿದನು ಶ್ರೀದತ್ತ ||೧೧||
ಮೂವತ್ತಬುಧವ ದಾಟಿಬಂದು ತಾಯ್ತಂದೆಯ ನೋಡಿದ ಶ್ರೀದತ್ತ | ಆವುದನೆಲ್ಲವ ನೀಡಿ ಹರಸುತ ಪಯಣವ ಬೆಳೆಸಿದ ಶ್ರೀದತ್ತ ।।೧೨||
ಉದರಶೂಲೆಯ ವಿಪ್ರನ ಜನ್ಮವನುಳಿಸಿ ಕಾಯ್ದನು ಶ್ರೀದತ್ತ | ಮುದದಿ ಪೂಜಿಸುವ ಸತಿಪತಿಯರನು ಕಂಡು ನಲಿದನು ಶ್ರೀದತ್ತ ||೧೩||
ಸಾಯನದೇವನ ಸಾವನು ತಪ್ಪಿಸಿ ಯವನನಂಜಿಸಿದ ಶ್ರೀದತ್ತ | ಧೈಯ ಸಾಧನೆಗೆ ಯಾತ್ರೆಯ ಮಾಡಲು ಶಿಷ್ಯನ ಕಳುಹಿದ ಶ್ರೀದತ್ತ ||೧೪||
ಗುಪ್ತವಾಗಿರಲು ಗುರುನಿಂದಕನಿಗೆ ಬೋಧವ ಮಾಡಿದ ಶ್ರೀದತ್ತ | ಸುಪ್ತ ಚೇತನೆಯ ಚಾಲಿಪ ಶಕ್ತಿಯು ಗುರುವಿಗಿದೆಂದನು ಶ್ರೀದತ್ತ ||೧೫||
ದೇವಿಯ ಬಳಿಯಲಿ ನಾಲಿಗೆ ಕೊಯ್ದಗೆ ಮತಿಯ ಪಾಲಿಸಿದ ಶ್ರೀದತ್ತ ಭಾವದಿ ಭಿಕ್ಷೆಯ ನೀಡಿದ ವಿಪ್ರಗೆ ಸಂಚಿತ ತೋರಿದ ಶ್ರೀದತ್ತ |॥೧೬||
ಯೋಗಿನಿಯರ ಸಹವಾಸದಿ ಇರುವನು ನರಸಿಂಹ ಸರಸ್ವತಿ ಶ್ರೀದತ್ತ | ಸಾಗಿ ಶೋಧಿಸಿದ ಅಂಬಿಗರವನಿಗೆ ಗುಪಿತವ ಹೇಳಿದ ಶ್ರೀದತ್ತ ॥೧೭||
ಹರಕೆಯ ಕುವರನ ಹರಣವ ಬರೆಸಿದ ಔದುಂಬರದಿ ಶ್ರೀದತ್ತ | ಬರುತ ಅಮರಜಾ ಭೀಮಾ ಸಂಗಮ ಕ್ಷೇತ್ರದ ತಂಗಿದ ಶ್ರೀದತ್ತ ||೧೮||
ಬರಡೆಮ್ಮೆಯನು ಕರೆಯಿಸಿ ಜನರಿಗೆ ಕೌತುಕ ತೋರಿದ ಶ್ರೀದತ್ತ | ಹರುಷದಿ ಕರೆಯಲು ಗಾಣಗಾಪುರಕೆ ನೆಲೆಸಬಂದನಾ ಶ್ರೀದತ್ತ ||೧೯||
ದೂರಮಾಡಿದ ಬ್ರಹ್ಮರಾಕ್ಷಸನ ಕುಮಸಿಗೆ ನಡೆದನು ಶ್ರೀದತ್ತ ತೋರಿದ ತ್ರಿವಿಕ್ರಮ ಭಾರತಿಗೆ ವಿಶ್ವರೂಪವನು ಶ್ರೀದತ್ತ ||೨೦||
ವಾದಿಸಬಂದಿಹ ಸೊಕ್ಕಿದ ವಿಪ್ರರ ಗರ್ವವ ಕಳೆದನು ಶ್ರೀದತ್ತ | ವೇದದಸಾರ ನಿರೂಪಣ ಮಾಡುತ ಅದ್ಭುತ ಹೇಳಿದ ಶ್ರೀದತ್ತ ||೨೧||
ತಿಳಿಯದ ವಿಪ್ರರು ವಾದವ ಬೆಳೆಸಲು ಹೊಲೆಯನ ಕರೆದನು ಶ್ರೀದತ್ತ | ಬಳಿದು ಭಸ್ಮವ ಕೃಪೆಯನು ಮಾಡುತ ವಾದಿಸ ಹೇಳಿದ ಶ್ರೀದತ್ತ ||೨೨||
ಪಾಪಿಗಳಾಗಲೇ ಅಂಜಿ ನಡುಗಿದರು ಶಾಪವ ಕೊಟ್ಟನು ಶ್ರೀದತ್ತ | ಪಾಪ ಪುಣ್ಯದ ಸಂಚಿತ ಕರ್ಮದ ಫಲವನುಸುರಿದ ಶ್ರೀದತ್ತ ||೨೩||
ಭಸ್ಮ ಮಹಾತ್ಮಿಯ ತಿಳಿಹೇಳಿದನು ವಾಮದೇವನು ಶ್ರೀದತ್ತ | ವಿಸ್ಮಯಗೊಂಡಿಹ ರಾಕ್ಷಸ ಜನುಮಕೆ ಮೋಕ್ಷವನಿತ್ತನು ಶ್ರೀದತ್ತ ||೨೪||
ಸತಿಸಾವಿತ್ರಿಯ ಪತಿ ಮೃತನಾಗಲು ಅಳುವುದ ಕಂಡನು ಶ್ರೀದತ್ತ | ಸತಿಧರ್ಮದ ಇತಿಹಾಸವ ಹೇಳುತ ಸತಿ ಹೋಗೆಂದನು ಶ್ರೀದತ್ತ ||೨೫||
ಹೋಗುವ ಮುನ್ನ ಕ್ಷೇತ್ರಕ್ಕೆ ಬಂದ ಬಾಲೆಯ ಹರಸಿದ ಶ್ರೀದತ್ತ | ಹೋಗದು ಜೀವ ಎನ್ನಯ ನುಡಿಯಿದು ಮಂಗಳವೆಂದನು ಶ್ರೀದತ್ತ ||೨೬||
ಚೇತರಿಸಿತು ಶವ ಅಭಿಷಿತ ಜಲದಿಂ ಪ್ರೋಕ್ಷಣೆ ಮಾಡಲು ಶ್ರೀದತ್ತ | ಆತುರದಿಂ ದಂಪತಿಗಳು ಬಾಗಲು ಆಶೀರ್ವದಿಸಿದ ಶ್ರೀದತ್ತ ||೨೭|
ರುದ್ರಾಧ್ಯಾಯದ ರುದ್ರಾಕ್ಷಿಯ ಕಥೆ ಹೇಳಿದನವರಿಗೆ ಶ್ರೀದತ್ತ ಭದ್ರೆ ಸಿಮಂತಿನಿ ಮಾಡಿದ ಚಂದಿರವಾರದ ವ್ರತವನು ಶ್ರೀದತ್ತ ||೨೮||
ಬೆಳಗಿನಿಂದಲಿ ರಾತ್ರಿಯವರೆಗಿನ ವಿಹಿತಕರ್ಮವನು ಶ್ರೀದತ್ತ | ತಿಳಿಯಪಡಿಸಿದ ವಿಪ್ರನ ಮಡದಿಗೆ ಪರಾನ್ನದೋಷವ ಶ್ರೀದತ್ತ ॥೨೯||
ಮೂವರ ಭೋಜನ ಅಕ್ಷಯವಾಗಿಸಿ ದಾಸಗೊಲಿದನು ಶ್ರೀದತ್ತ | ಸಾವ ಸಮೀಪದ ಗಂಗಾಮಾತೆಗೆ ಮಕ್ಕಳಕೊಟ್ಟನು ಶ್ರೀದತ್ತ ॥೩೦||
ಒಣಮರ ಚಿಗುರಿಸಿ ನರಹರಿ ವಿಪ್ರನ ಕುಷ್ಣವ ಕಳೆದನು ಶ್ರೀದತ್ತ | ಅಣುಕದಿ ಅಂಜಿಕೆ ತೋರುತ ಶಿಷ್ಯನ ಪರೀಕ್ಷೆ ಮಾಡಿದ ಶ್ರೀದತ್ತ ||೩೧||
ಕಾಶೀಕ್ಷೇತ್ರದ ಮಹಿಮೆಯ ತೋರಿದ ಸಾಯನದೇವಗೆ ಶ್ರೀದತ್ತ | ತೋಷದೊಲವನು ಹಾಡುತಲೆಂದನು ಹರಿಹರ ಬ್ರಹ್ಮನು ಶ್ರೀದತ್ತ ||೩೨||
ಅನಂತನಾವ್ರತ ಮಹಿಮೆಯ ಹೇಳುತ ವ್ರತ ಮಾಡಿಸಿದನು ಶ್ರೀದತ್ತ ಅನಂತಕೋಟಿಯು ಅನಂತರೂಪನು ಅನಂತಮಹಿಮನು ಶ್ರೀದತ್ತ ||೩೩|
ನೇಕಾರಗೆ ಶ್ರೀಶೈಲದ ಯಾತ್ರೆಯ ಮಾಡಿಸಿದನು ತಾ ಶ್ರೀದತ್ತ ಸಾಕಾರದಿ ಶಿವರಾತ್ರಿ ಮಹಾತ್ಮಿಯ ಹೇಳಿದನಾತಗೆ ಶ್ರೀದತ್ತ ||೩೪||
ದೇವಿಯ ಭಕ್ತನ ಕುಷ್ಠ ನಿವಾರಿಸಿ ಜ್ಞಾನವಕೊಟ್ಟನು ಶ್ರೀದತ್ತ | ಕವಿಯಾದಾ ಕಶನರ್ಚಕನ ಶಿಷ್ಯನ ಮಾಡಿದ ಶ್ರೀದತ್ತ ||೩೫||
ಹಸುಳರೆಲ್ಲರನು ಮೆಚ್ಚಿಸಿ ಧರಿಸಿದ ಎಂಟು ರೂಪವನು ಶ್ರೀದತ್ತ ಕೃಷಿಕನ ಮೌನಾರ್ಚನೆಗೊಲಿದಿತ್ತನು ನೂರ್ಮಡಿ ಧಾನ್ಯವ ಶ್ರೀದತ್ತ ||೩೬|
ಪುರಜನರಿಂ ಸಹ ಸಕಲ ತೀರ್ಥಗಳ ಯಾತ್ರೆಯ ಮಾಡಿದ ಶ್ರೀದತ್ತ | ಪೂರ್ವಾಶ್ರಮದ ಭಗಿನಿಯ ಪಾಪಕ್ಷಾಲನೆ ಮಾಡಿದ ಶ್ರೀದತ್ತ ||೩೭||
ಹರುಷದಿ ಹೇಳಿದ ಗುರುಗೀತೆಯನು ನಾಮಧಾರಕಗೆ ಶ್ರೀದತ್ತ | ನೆರೆ ನಂಬುವರನು ಪರಿಪಾಲಿಸುವುದು ನಿಶ್ಚಿತವೆಂದನು ಶ್ರೀದತ್ತ ||೩೮||
ಯಾಕೋ ರಜಕಾ ಎನ್ನುತ ಯವನರ ರಾಜನ ಕರೆದನು ಶ್ರೀದತ್ತ | ಕಾಕುಗೊಂಡಿಹ ರಾಜನ ಮಂಡಿಯ ರೋಗವ ಕಳೆದನು ಶ್ರೀದತ್ತ ||೩೯||
ಯವನರ ಕಾಟಕೆ ಕದಳೀವನಕೆ ಹೋಗುವೆನೆಂದನು ಶ್ರೀದತ್ತ | ಅವಸರದಿಂ ಬಲು ಶೋಕಿಸಬೇಡಿರಿ ಇಲ್ಲಿ ಹೆನೆಂದನು ಶ್ರೀದತ್ತ ||೪೦||
ಹಾಡಿರಿ ಹಾಡಿರಿ ಮತ್ತು ಆರತಿ ಮಾಡಿರಿ ಎಂದನು ಶ್ರೀದತ್ತ | ಬೇಡಿದ ವರವನು ಕೊಡುವೆನು ಭಾವಿಕ ಜನರಿಗೆ ಸತ್ಯವಿದೆಂದನು ಶ್ರೀದತ್ತ ||೪೧|
ಅತಿ ಸಂಕ್ಷೇಪದ ಈ ಗುರುಚರಿತೆಯ ದಿನವೂ ಹಾಡುವ ಕೇಳ್ವರಿಗೆ | ಅತಿ ಆನಂದವು ಮೇಣ್ ಸುಖಸಂಪದ ಪಾಲಿಸುವನು ತಾ ಶ್ರೀದತ್ತ ||೪೨||
ಮಂದಮತಿ ನಾ ತೊದಲ್ನುಡಿಯಿಂದಲಿ ಹಾಡಿದೆನಿದನು ಶ್ರೀದತ್ತ | ವಂದಿಸುತಲಿ ನಾ ಅರ್ಚನೆ ಮಾಡುವೆ ನಿನ್ನಡಿಗಳಿಗೆ ಶ್ರೀದತ್ತ ।।೪೩||
ಮಂಗಳ ಮಂಗಳ ನಿತ್ಯಸುಮಂಗಳ ಮಂಗಳಮಯ ಶ್ರೀದತ್ತ | ಗಂಗೆಮಾಳಾಂಬಿಕೆಕಾಂತಸ್ವರೂಪನು ಸಚ್ಚಿದಾನಂದಮಯ ಶ್ರೀದತ್ತ ||೪೪||
ಸಿದ್ಧಾಂತ ಅವಧೂತ ಚಿಂತನ ಶ್ರೀ ಗುರುದೇವದತ್ತ || ಶ್ರೀಕೃಷ್ಣಾರ್ಪಣಮಸ್ತು |
ಶ್ರೀ ಕೃಷ್ಣಾರ್ಪಣಮಸ್ತು
ಆಶಾ ನಾಗಭೂಷಣ.
21 фев 2024