#ಸುಧಾಮನ_ಹಾಡು
ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ | ಸುತಗೆ
ವಂದನೆಯ ಮಾಡಿದಳು ||
ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ ಸ- |
ದ್ಗತಿಯಾಗಲೆನುತ ಪೇಳಿದಳು || ೧ ||
ಸುಧಾಮನೆಂಬೋರ್ವ ಸೂಕ್ಷ್ಮದ ಬ್ರಾಹ್ಮಣ |
ಹೊದಿಯಲಿಕ್ಕಿಲ್ಲ ಆಶನವಿಲ್ಲ ||
ಗದಗದ ನಡುಗುತ ಮಧುರ ಮಾತಾಡುತ |
ಸದನದೊಳಿರುತಿದ್ದನಾಗ || ೨ ||
ಪ್ರಾತಃ ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ | ನಾಥನ
ಧ್ಯಾನ ಮಾಡುತಲಿ ||
ಪಾತ್ರರ ಮನೆಗ್ಹೋಗಿ ಯಾಚನೆಗಳ ಮಾಡಿ | ಗ್ರಾಸ
ತರುವನು ಮುಷ್ಟಿ ತುಂಬ || ೩ ||
ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕೆಂದು | ಹಿತದಿಂದ
ಪಾಕ ಮಾಡುವಳು ||
ಅತಿ ಭಕ್ತಿಯಿಂದಲಿ ಪತಿಗೆ ಭೋಜನ ಬಡಿಸಿ | ಮತಿವಂತಿ
ಉಳಿದದ್ದುಂಬುವಳು || ೪ ||
ಹಸಿವೆ ತೃಷೆಗಳಿಂದ ಅತಿಕ್ಲೇಶವಾಗಿದ್ದು | ಪತಿಕೂಡೆ
ಮಾತನಾಡಿದಳು ||
ಗತಿಯೇನು ನಮಗಿನ್ನು ಹಿತದವರ್ಯಾರಿಲ್ಲ ಸ- |
ದ್ಗತಿಯೇನೆನುತ ಪೇಳಿದಳು || ೫ ||
ಪೊಡವಿಯೊಳಗೆ ನಿಮ್ಮ ಒಡಹುಟ್ಟಿದವರಿಲ್ಲೆ | ಒಡನೆ
ಆಡಿದ ಗೆಳೆಯರಿಲ್ಲೆ ||
ಕರೆದು ಕೂಡಿಸಿಕೊಂಡು ಬಿರುಸು ಮಾತ್ಹೆಳುವ | ಹಿರಿಯರು
ದಾರಿಲ್ಲೆ ನಿಮಗೆ || ೬ ||
ಚಿಕ್ಕಂದಿಲ್ಲೋದಿಲ್ಲೆ ಹೆತ್ತವರ್ಹೆಳಿಲ್ಲೆ | ಉತ್ತಮ ಗುರುಗೋಳಿಲ್ಲೆನು
||
ಹೊತ್ತು ವೇಳೆಗಾಗೋ ಮಿತ್ರರು ಯಾರಿಲ್ಲೆ ಮತ್ತೆ ಕೇಳಿದಳು
ಕ್ಲೇಶದಲಿ || ೭ ||
ಮಡದಿ ಮಾತನು ಕೇಳಿ ಮನದಲಿ ಯೋಚಿಸಿ |
ಹುಡುಗನಾಗಿರಲಿಕ್ಕೆ ಹೋಗಿ ||
ಗುರುಕುಲ ವಾಸದಲಿ ಹರಿ ನಾವು ಓದಿದ್ದು | ಹರಿ ಹೊರ್ತು
ಮತ್ತೊಬ್ಬರಿಲ್ಲಾ || ೮ ||
ಇನ್ನೊಬ್ಬರೇತಕೆ ಅನ್ಯರಪೇಕ್ಷೇಕೆ | ಮನ್ನಿಸಿ ಹೋಗಿ
ಬರ್ರೆಂದಳು ||
ಇನ್ನೇನು ಕೊಡತಿಯೆ ಹರಿ ಮುಂದೆ ಇಡಲಿಕ್ಕೆ | ಚೆನ್ನಾಗಿ
ಕೇಳಿದನಾಗ || ೯ ||
ಗಾಬರಿಯಾದಳು ಸಾಗಿ ತಾ ನಡೆದಳು | ಬೇಗ ತಂದಳು
ಅವಲಕ್ಕಿ ||
ಬಾಗಿ ವಸ್ತ್ರದೊಳು ಬೇಗ ಕಟ್ಟಿಕೊಟ್ಟು | ಹೋಗಿ ಬರ್ರೆನುತ
ಪೇಳಿದಳು || ೧೦ ||
ಅಂಗಳವನು ಬಿಟ್ಟು ಮುಂದಕೆ ಬಂದನು | ಹಂಗ
ಹಾರುವುದು ಎಡಕೆ ||
ಮಂಗಳವಾಗುವುದು ರಂಗನ ದರುಶನ |
ಸಂದೇಹವಿಲ್ಲದಾಗುವುದು || ೧೧ ||
ಬಾಗಿಲವನು ಬಿಟ್ಟು ಸಾಗಿ ಮುಂದಕೆ ಬರಲು | ಕಾಗಿ
ಹಾರ್ಹೋದವು ಬಲಕೆ ||
ಆಗುವುದು ನಮಗಿನ್ನು ಆಗುವುದು ಶುಭ ಚಿನ್ಹ |
ಆಗುವುದು ಹರಿ ಕೃಪೆಯಿಂದ || ೧೨ ||
ಹೀಗೆಂದ ಬ್ರಾಹ್ಮಣ ಮುಂದಕೆ ನಡೆದನು | ಕಂಡನು
ಕಮಲ ಪುಷ್ಪಗಳ ||
ರಂಗನ ಹೆಂಡರಿಗೆ ಹೆರಳಿಗೆ ಬೇಕೆಂದು |
ತೆಗೆದುಕೊಂಡನು ಕಮಲ ಪುಷ್ಪಗಳ || ೧೩ ||
ಹರಿಯುವ ಜಲವೆಲ್ಲ ಹರಿಯಭಿಷೇಕವೆಂ- | ದ್ಹರುಷದಲಿ
ತುಂಬಿಕೊಂಡು ||
ಕರದಲ್ಲಿ ಹಿಡಕೊಂಡು ಪುರದ ಬಾಗಿಲ ಮುಂದೆ | ಹರಿ
ಹ್ಯಾಗೆ ದೊರಕುವ ನೆಂದ || ೧೪ ||
ನಿಂತನು ಬ್ರಾಹ್ಮಣನ ಅನಂತ ರೂಪದಿ ಧ್ಯಾನ | ಅಂತ
ರಂಗದಲಿ ಮಾಡುತಲಿ ||
ಸಂತೋಷದಿಂದಲಿ ಧರಿಸಿದ ದಶರೂಪ- |ದಿಂದ
ಬಂದೆನ್ನ ಕಾಯೆಂದ || ೧೫ ||
ಹರಕು ವಸ್ತ್ರವನುಟ್ಟು ಹರಿ ಧ್ಯಾನ ಮಾಡುವ | ವಿಪ್ರನ
ಕಂಡು ಚಾರಕರು ||
ಬರಬೇಡಿರೊಳಗೆ ಹಿರಿಯರಪ್ಪಣೆಯಿಲ್ಲ | ತಿರುಗಿ ಹೋಗೆನುತ
ಹೇಳಿದರು || ೧೬ ||
ಅಂದ ಮಾತನು ಕೇಳಿ ಅಂಜಿದ ಬ್ರಾಹ್ಮಣ |
ಇಂದಿರಾರಮಣಗ್ಹೇಳೆಂದ ||
ಹೆಸರು ಸುಧಾಮನಂತೆ ಹಸಿದು ಬಂದಾರೆಂದು |
ವಸುದೇವ ತನಯಗ್ಹೇಳಿದರು || ೧೭ ||
ಕೇಳಿದ ಹರಿಯೆದ್ದು ಬಹಳ ಹರುಷದಿಂದ | ಬೇಗನೆ
ಕರೆತನ್ನಿರವನ ||
ಹೋಗು ಹೋಗೆಂದರೆ ಸಾಗಿ ಮುಂದಕೆ ಬರಲು | ಬಾಗಿಲಿಗೆ
ಬಂದ ಸುಧಾಮ || ೧೮ ||
ಬಂದ ಭಕ್ತನ ನೋಡಿ ಆನಂದದಿಂದೆದ್ದು | ವಂದಿಸಿ
ಆಸನವ ಹಾಕಿದರು ||
ಚಂದದಿಂದಲಿ ಕರವ ಹಿಡಿದು ಮಾತಾಡುತ | ಬಂದ
ಕಾರಣವ ಕೇಳಿದರು || ೧೯ ||
ಮಂದಗಮನೆ ಸಹಿತ ತಂದ ಉದಕದಿಂದ |
ಚಂದದಿಂದಲಿ ಪಾದ ತೊಳೆದು ||
ಗಂಧ ಕೇಶರ ಹಚ್ಚಿ ಚೆಂದ ಚಾಮರದಿಂದ | ಅಂದದಿ
ಗಾಳಿ ಬೀಸಿದರು || ೨೦ ||
ಹಸಿದು ಬಂದಾರೆಂದು ಹಸಿವೆಗೆ ತಕ್ಕಂಥ | ಹಸನಾದ
ಹಣ್ಣು ಸಕ್ಕರೆಯು ||
ಕುಸುಮ ನಾಭನು ತಾನು ಪನ್ನೀರು ತಂದೀಡೆ | ಉಂಡು
ಕೈತೊಳೆದ ಸುಧಾಮ || ೨೧ ||
ಮಂದರಧರಗಿನ್ನು ಸುಂದರ ಸತಿಯರು | ತಂದರು ತಬಕ
ವಿಳ್ಯವನು ||
ಇಂದಿರೆರಮಣನು ಬಂದ ಸುಧಾಮನು | ಚಂದದಿ
ಮೆಲೆದರು ವಿಳ್ಯವನು || ೨೨ ||
ಶ್ರಮ ಬಹಳವಾಗಿದೆ ಶ್ರಮಿಸಿಕೊಳ್ಳಿರೆಂದು | ಸೆಳೆ
ಮಂಚ ತಂದ್ಹಾಕಿದರು ||
ಶಾಲು ಸಕಲಾತಿಯು ಮೇಲಾದ ಹಾಸಿಗೆ | ಮೇಲೆ ಮಲಗಿದನು
ಸುಧಾಮ || ೨೩ ||
ಅಂದಿನ ರಾತ್ರಿಯಲಿ ಮಂದಗಮನೇಯರ ಬಿಟ್ಟು | ಬಂದು
ಮಲಗಿದನು ಶ್ರೀಹರಿಯು ||
ಹಿಂದಿನ ವೃತ್ತಾಂತ ಒಂದೊಂದು ಸ್ಮರಿಸುತ | ಆನಂದದಿ
ಹರಿಯು ಸುಧಾಮ || ೨೪ ||
ಅಂದಿನ ಸ್ನೇಹವು ಇಂದೇಕೆ ನೆನಪಾಯ್ತು | ಬಂದೀರಿ
ಬಹುದಿನಕೆಂದ ||
ಹೆಂಡತಿ ಮಕ್ಕಳು ಇಹರೇನು ನಿಮಗೆಂದು | ಇಂದಿರೆ ರಮಣ
ಕೇಳಿದನು || ೨೫ ||
ಹೆಂಡತಿ ಕಳುಹಿದಳು ರಂಗನ ದರುಷನ | ಕೊಂಡು
ಬಾರೆನುತ ಪೇಳಿದಳು ||
ತಂದದ್ದು ಕೊಡಲಿಕ್ಕೆ ಸಂದೇಹವೇತಕ್ಕೆ | ತಂಡುಲ ಹಿಡಿದು
ಜಗ್ಗಿದನು || ೨೬ ||
ಮುಷ್ಟಿತುಂಬವಲಕ್ಕಿ ಮುಕ್ಕಿದ ಹರಿ ಬೇಗ | ನಕ್ಕರು
ಸತಿಯರೆಲ್ಲ ||
ಇಷ್ಟೇ ಸಾಕು ಎಂದು ಗಟ್ಯಾಗಿ ಕೈ ಹಿಡಿಯೆ | ಕೊಟ್ಟನು
ಭಕ್ತನಿಗೆ ಐಶ್ವರ್ಯ || ೨೭ ||
ಹದಿನಾರು ಸಾವಿರ ಚದುರೆಯರ ಕರೆಸಿದ | ಕೊಡಿಸಿದೆಲ್ಲರಿಗೆ
ತಂಡುಲವ ||
ಉಳಿಸಿದ ಅವಲಕ್ಕಿ ಉಣಲಿಕ್ಕೆ ಮಾರ್ಗಕ್ಕೆ | ಬೇಕೆಂದು ಬಿಗಿದು
ಕಟ್ಟಿದರು || ೨೮ ||
ರನ್ನದ ಬಾಗಿಲಿಗೆ ಚಿನ್ನದ ಚೌಕಟ್ಟು | ಹೊನ್ನ
ಹೊಸ್ತಲವ ನಿರ್ಮಿಸಿದ ||
ರನ್ನ ಮಾಣಿಕ ಬಿಗಿದ ತೊಲಿ ಕಂಬ ಗಿಳಿಬೋದು |
ಪನ್ನಗಶಯನ ನಿರ್ಮಿಸಿದ || ೨೯ ||
ಇರಿರಿ ನಾಲ್ಕುದಿವಸ ತ್ವರೆ ಯಾಕೆ ಮಾಡುವಿರಿ | ಇರಲಿಕ್ಕೆ
ಬಾರದೆಯೆಂದಾ ||
ನೆರೆ ಹೊರೆ ಯಾರಿಲ್ಲ ತರುಣಿಯೊಬ್ಬಳಿಹಳು | ಇರಲಿ ನಾ ಹೇಗೆ
ಪೇಳೆಂದ || ೩೦ ||
ಪಾದಕೆ ಎರಗಿ ತಾ ಸಾಗಿ ಮುಂದಕೆ ಬಂದ | ಬಾಗಿಲಿಗೆ
ಬಂದ ಸುಧಾಮ ||
ಹೋಗಿರಿ ಹಿಂದಕೆ ಹೋಗಿ ಬರುತೇನೆನಲು | ಬಾಗಿ ಕೈ ಮುಗಿದ
ಶ್ರೀಹರಿಯು || ೩೧ ||
ಮುಂದಕೆ ಬಂದನು ಇಂದೇನು ಕೊಡಲಿಲ್ಲ | ಹೆಂಡತಿಗೆ
ಹೇಳಲೇನೆಂದ ||
ನಿಂತನು ಒಣಿಯಲಿ ಮಂದಿರ ಸಿಗಲಿಲ್ಲ | ಹೆಂಡತಿಯ ಕಂಡ
ಸುಧಾಮ || ೩೨ ||
ಮಂದಿರವನ್ನೆಲ್ಲ ಕಂಡನು ಐಶ್ವರ್ಯ |
ಚಂದದಿಂದಾಭರಣ ಕಂಡ ||
ಇಂದಿರಾಪತಿಯನ್ನು ಕಂಡು ಬಂದುದರಿಂದ | ಬಂದಿತು
ಸಕಲ ಸಂಪತ್ತು || ೩೩ ||
ರವಿವಾರ ಹಾಡಿದರೆ ರಾಜಕಾರ್ಯವಾಗುವುದು | ಬಂಜೆಗೆ
ಮಕ್ಕಳಾಗುವವು ||
ಬರಡೆಮ್ಮೆ ಕರೆಯೋದು ಬಡತನ ಹಿಂಗುವುದು |
ಗುರುವಾರ ಹಾಡಿದವರಿಗೆ || ೩೪ ||
ಶ್ರೀನಿವಾಸನ ಧ್ಯಾನ ಮೌನದಿಂದಲಿ ಮಾಡಿ | ನಾನಾ
ಸಂಪತ್ತು ಪಡೆದರು ||
ಅದರ ವಿಷಯ ತಿಳಿದು ಗತಿ ಮೋಕ್ಷ ಇರಲೆಂದು | ಶ್ರೀ ಹರಿ
ಕೊಡು ದೇವ ಸಿರಿಯ || ೩೫ ||
ಇದು ಭಾಗವತವೆನ್ನಿ ಇದು ಭಾಗವತವೆನ್ನಿ | ಇದು
ಭಾಗವತಕೆ ಕೀಲಗಳು |
ಇದಕೆ ಪ್ರಿಯನು ನಮ್ಮ ಪುರಂದರವಿಠ್ಠಲ | ಇದರಿಂದ
ಮುಕ್ತಿ ಕೊಡುವನು || ೩೬ ||
23 мар 2024